28/08/2026
ಕಡೆಗೆ ಜಯ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ! ಶೀಘ್ರದಿನೆ ಜಯಬಾರದೇಕೋ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದುಕನಲಿ ಮರುಳ ಮುನಿಯ || ೨೬೯
ಮುದುಕ = ಇಲ್ಲಿ ಮುಪ್ಪು.
ದಿಟ = ನಿಜ
ಪೊಡವಿ = ಭೂಮಿ, ಇಲ್ಲಿ ರಾಜ್ಯ.
ಐತರೆ= ಬರಲು.
ಉಡುಗು = ಕುಂದು, ದುರ್ಬಲನಾಗು.
ಸತ್ಯಕ್ಕೇ ಜಯವೆನ್ನುವುದು ನಿತ್ಯವಾದ ಮಾತು. ಆದರೆ ಯಾವಾಗ ಎಂಬುದು ಪ್ರಶ್ನೆ. ಬದುಕೆಲ್ಲ ಹೋರಾಡಿ ಪಡೆದ ಜಯವನ್ನು ಅನುಭವಿಸಲಾಗದೆ ಸತ್ತರೆ ಅದಕ್ಕೆ ಬೆಲೆಯುಂಟೇ.
ಸತ್ಯವೇ ಗೆಲ್ಲುವುದಾದರೆ, ಅದಕ್ಕೆ ತಡವೇಕೆ? ತಕ್ಷಣವೇ ಗೆಲ್ಲಬಾರದೇ. ಜನರು ಮೋಸಗಾರರಿಗೆ ಆಕರ್ಷಿತರಾಗುವಂತೆ ಸತ್ಯವಂತರೆಡೆಗೆ ಸೆಳೆಯಲ್ಪಡುವುದಿಲ್ಲ. ನಯವಂಚನೆಯ ಮಾತುಗಳು ಆಪ್ಯಾಯಮಾನವಾಗುತ್ತವೆ. ಸತ್ಯವು ಕಹಿ ಗುಳಿಗೆಯಿದ್ದಂತೆ.
ಹರಿಶ್ಚಂದ್ರನ ವಿಚಾರವನ್ನು ಪ್ರಸ್ತಾಪಿಸಿ ಅವನು ಪಟ್ಟ ಶ್ರಮದ ಉಲ್ಲೇಖ ಮಾಡಿ ಅದನ್ನು ವೈಭವೀಕರಿಸಿದರೂ, ಅವನು ಸತಿಸುತರನ್ನು ಮರಳಿ ಪಡೆದಾಗ ಮದುಕನಾಗಿ ದುರ್ಬಲನಾಗಿದ್ದ. ಆಗ ಅವನೆಂತಹ ದೈಹಿಕ ಸುಖ ಅನುಭವಿಸಿದ? ಎಂಬ ಪ್ರಶ್ನೆ ಎತ್ತಲಾಗಿದೆ.
ನಾವು ಗಮನಿಸಬೇಕಾದುದು. ನಮ್ಮ ಕರ್ತವ್ಯವನ್ನು ಹರಿಶ್ಚಂದ್ರನು ಹಾಗಿ ಕಷ್ಟದ ಹಾದಿಯಲ್ಲಿ ನಡೆದು ಬಂದ ಕಾರಣಕ್ಕಾಗಿಯೇ ಇಂದಿಗೂ ಜನಮಾನಸದಲ್ಲಿ ಉಳಿದನು.
ನಮ್ಮಕೆಲಸಗಳ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಧರ್ಮದೀಪವಾಗಬೇಕೇ ಹೊರತು, ಅಧರ್ಮ ಕಾರಣವಾಗಬಾರದು.
ಅದಾವ ಜನ ತಮ್ಮ ಮಕ್ಕಳಿಗೆ ಮಂಥರೆಯೆಂದೋ, ನಕ್ಷತ್ರಿಕನೆಂದೋ ಹೆಸರಿಡುತ್ತಾರೆ. ನಡವಳಿಕೆ ನಮ್ಮ ಸಂಸ್ಕೃತಿಯ ಉಸಿರು. ಅದನ್ನು ಬಳಸೋಣ, ಬೆಳೆಸೋಣ.